ದ್ವೇಷಭಾಷಣ- ವಿಚಾರಣೆಗೆ ಹಾಜರಾಗಲು ಬಾಬಾ ರಾಮ್ ದೇವ್‌ಗೆ ಹೈಕೋರ್ಟ್ ಸೂಚನೆ

ಜೈಪುರ: ಯೋಗಗುರು ಬಾಬಾ ರಾಮ್ ದೇವ್‌ಗೆ ದ್ವೇಷಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅಕ್ಟೋಬರ್ 5ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ರಾಜಸ್ಥಾನ ಹೈಕೋರ್ಟ್ ಸೂಚನೆ ನೀಡಿದೆ.

ವಿಚಾರಣೆಗಾಗಿ ತನಿಖಾಧಿಕಾರಿಗಳು ಕರೆದಾಗಲೆಲ್ಲ ಬಾಬಾ ರಾಮ್ ದೇವ್ ಹಾಜರಾಗಬೇಕು ಎಂದು ನ್ಯಾಯಮೂರ್ತಿ ಕುಲದೀಪ್ ಮಾಥುರ್ ಅವರಿದ್ದ ನ್ಯಾಯಪೀಠ ಸೂಚನೆ ನೀಡಿದ್ದು, ಜೊತೆಗೆ ಅವರ ಬಂಧನಕ್ಕೆ ಏಪ್ರಿಲ್ 13ರಂದು ವಿಧಿಸಿದ್ದ ತಡೆಯಾಜ್ಞೆಯನ್ನು ಅಕ್ಟೋಬರ್ 16ರವರೆಗೆ ವಿಸ್ತರಿಸಿದೆ.

ಇನ್ನು ಮುಂದಿನ ವಿಚಾರಣೆ ನಡೆಯುವ ಅಕ್ಟೋಬರ್ 16ರಂದು ಕೇಸ್ ಡೈರಿಯನ್ನು ನ್ಯಾಯಾಲಯಕ್ಕೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು ಸರ್ಕಾರಿ ಅಭಿಯೋಜಕರಿಗೆ ರಾಜಸ್ಥಾನ ಹೈಕೋರ್ಟ್ ಸೂಚನೆ ನೀಡಿದೆ.

ಮುಸ್ಲಿಮರು “ಭಯೋತ್ಪಾದಕ ಕೃತ್ಯಗಳನ್ನು” ಎಸಗುತ್ತಿದ್ದಾರೆ ಹಾಗೂ ಹಿಂದೂ ಮಹಿಳೆಯರನ್ನು ಅಪಹರಿಸುತ್ತಿದ್ದಾರೆ ಎಂದು ರಾಮ್ ದೇವ್ ತಮ್ಮ ಭಾಷಣದಲ್ಲಿ ಹೇಳಿದ್ದು,ಅವರ ವಿರುದ್ದ ಬರ್ನೇರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.

Comments (0)
Add Comment