‘ನನ್ನ ಜೊತೆ ವಿಜಯೇಂದ್ರ ಮಂಪರು ಪರೀಕ್ಷೆ ಲೈವ್ ಆಗಬೇಕು’- ಬಿ.ಕೆ ಹರಿಪ್ರಸಾದ್

ನವದೆಹಲಿ: ನನ್ನ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ. ಮಂಪರು ಪರೀಕ್ಷೆ ಲೈವ್ ಆಗಬೇಕು. ಟಿವಿಯಲ್ಲಿ ಪ್ರಸಾರ ಮಾಡಬೇಕು ಎಂದು ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಸವಾಲು ಹಾಕಿದ್ದಾರೆ.

ರಾಮಮಂದಿರ ಉದ್ಘಾಟನೆ ವೇಳೆ ಗೋದ್ರಾ ತರಹದ ಘಟನೆ ಸಂಭವಿಸಬಹುದು ಎಂದು ಕೆಲ ದಿನಗಳ ಹಿಂದೆ ಬಿ.ಕೆ ಹರಿಪ್ರಸಾದ್ ಅವರು ನೀಡಿದ್ದ ಹೇಳಿಕೆಗೆ, ಹರಿಪ್ರಸಾದ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿ.ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದರು. ಇದೀಗ ವಿಜಯೇಂದ್ರ ಹೇಳಿಕೆಗೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಏಕಕಾಲದಲ್ಲಿ ನನ್ನ ಮತ್ತು ವಿಜಯೇಂದ್ರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಪ್ರತಿ ಸವಾಲು ಹಾಕಿದ್ದಾರೆ.

ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರು ಹುಮ್ಮಸ್ಸಿನಲ್ಲಿ ಹೇಳಿರುವುದನ್ನೇ ಹೇಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ 40,000 ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿ ನಾಯಕ ಬಸನಗೌಡ ಯತ್ನಾಳ್ ತಿಳಿಸಿದ್ದಾರೆ. ಆದ್ದರಿಂದ ನನ್ನ ಮತ್ತು ವಿಜಯೇಂದ್ರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ. ವಿಜಯೇಂದ್ರ ಅವರನ್ನು ನನ್ನ ಜೊತೆಗೆ ಲೈವ್ ಆಗಿ ಮಂಪರು ಪರೀಕ್ಷೆಗೆ ಒಳಪಡಿಸುವುದಾದರೆ ನಾನು ಮಂಪರು ಪರೀಕ್ಷೆಗೆ ಒಳಪಡಲು ಸಿದ್ಧ ಎಂದು ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ.

Comments (0)
Add Comment