ಪತಿ-ಪತ್ನಿಯ ಜಗಳ; ಕೊಲೆಯಲ್ಲಿ ಅಂತ್ಯ..!

ವಿಜಯನಗರ: ದಾಂಪತ್ಯ ಕಲಹ ಹಿನ್ನೆಲೆ ಪತಿಯಿಂದಲೇ ಪತ್ನಿಯ ಕೊಲೆ ನಡೆದ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ನಡೆದಿದೆ. ಎಚ್.ಡಿ. ಕೋಟೆ ತಾಲೂಕಿನ ಮಾದಾಪುರ ಗ್ರಾಮದ ಡಿಂಪಲ್ (36) ಕೊಲೆಯಾದ ಮಹಿಳೆ.

ಕೊಲೆಯಾದ ಡಿಂಪಲ್​ ಈ ಹಿಂದೆ ಎರಡು ಮದ್ವೆ ಆಗಿದ್ದಳು. ಡಿಂಪಲ್​ಗೆ ಶ್ರೀಕಾಂತ್​ ಮೂರನೇ ಗಂಡನಾಗಿದ್ದ. ಶ್ರೀಕಾಂತ್‌ನಿಗೆ ಡಿಂಪಲ್‌ಗೆ ಎರಡನೇ ಹೆಂಡ್ತಿಯಾಗಿದ್ದಳು. ಪರಸ್ಪರ ಪ್ರೀತಿ ಮಾಡಿ ಇಬ್ಬರು ಮದ್ವೆ ಆಗಿದ್ದರು. ಆದರೆ ಮದುವೆಯಾದ ಬಳಿಕ ಡಿಂಪಲ್ ಹಾಗೂ ಶ್ರೀಕಾಂತ್ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಕೊನೆಗೆ ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಶ್ರೀಕಾಂತ್ ಪತ್ನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.ಶ್ರೀಕಾಂತ್‌ ಮತ್ತು ಡಿಂಪಲ್‌ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯಾಧಿಕಾರಿಯಾಗಿ ಡಿಂಪಲ್ ಸೇವೆ ಸಲ್ಲಿಸುತ್ತಿದ್ದಳು.ಅತ್ತ ಶ್ರೀಕಾಂತ್​ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡಾದ ನಿವಾಸಿಯಾಗಿದ್ದು, ನೆಲ್ಲುಕುದುರಿ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರದ ಸಮುದಾಯದ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದನು.

ಇಬ್ಬರು ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ವಾಸವಾಗಿದ್ದರು. ಪರಸ್ಪರ ಅನ್ನೋನ್ಯವಾಗಿದ್ದ ದಂಪತಿಗಳು ನಡುವೆ ಏಕಾಏಕಿಯಾಗಿ ಜಗಳ ಪ್ರಾರಂಭವಾಗಿದೆ. ಕೊನೆಗೆ ಹೆಂಡತಿಯನ್ನ ಕೊಲೆ ಮಾಡಿ, ಆರೋಪಿ ಶ್ರೀಕಾಂತ ಇಟಗಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)
Add Comment