ಪಾರ್ಸಿಗಳು, ಕ್ರೈಸ್ತರು ಸಿಎಎಗೆ ಅರ್ಹರು ಆದರೆ ಮುಸ್ಲಿಮರಲ್ಲ : ಅಮಿತ್ ಶಾ ಸ್ಪಷ್ಟನೆ

ನವದೆಹಲಿ : ಇತ್ತೀಚೆಗೆ ಅಧಿಸೂಚನೆ ಹೊರಡಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಜಾರಿಗೆ ತರಲಾಗಿದ್ದು,ಇದನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ಕೇಂದ್ರ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಅವರಿಗೆ, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡಲಾಗುತ್ತದೆ. ಆದರೆ ಮುಸ್ಲಿಮರಿಗೆ ಯಾಕೆ ಇಲ್ಲ ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಶಾ, “ಮುಸ್ಲಿಂ ಜನಸಂಖ್ಯೆಯಿಂದಾಗಿ ಆ (ಪ್ರದೇಶ) ಇಂದು ಭಾರತದ ಭಾಗವಾಗಿಲ್ಲ.

ಅದನ್ನು ಅವರಿಗಾಗಿ ನೀಡಲಾಗಿದೆ. ಅಖಂಡ ಭಾರತದ ಭಾಗವಾಗಿರುವ ಮತ್ತು ಧಾರ್ಮಿಕ ಕಿರುಕುಳ ಅನುಭವಿಸಿದವರಿಗೆ ಆಶ್ರಯ ನೀಡುವುದು ನಮ್ಮ ನೈತಿಕ ಮತ್ತು ಸಾಂವಿಧಾನಿಕ ಜವಾಬ್ದಾರಿ ಎಂದು ನಾನು ನಂಬುತ್ತೇನೆ ಎಂದಿದ್ದಾರೆ . ಅಖಂಡ ಭಾರತವು ಆಧುನಿಕ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಮ್ಯಾನ್ಮಾರ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಟಿಬೆಟ್ ಅನ್ನು ವ್ಯಾಪಿಸಿರುವ ಅಖಂಡ ಭಾರತ ಪರಿಕಲ್ಪನೆಯಾಗಿದೆ.

ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಹಿಂದೂಗಳು ಶೇಕಡಾ 23 ರಷ್ಟಿದ್ದರು.”ಈಗ ಅದು ಶೇಕಡಾ 3.7 ಕ್ಕೆ ಇಳಿದಿದೆ. ಅವರು ಎಲ್ಲಿಗೆ ಹೋದರು? ಇಷ್ಟು ಜನರು ಇಲ್ಲಿಗೆ ಬಂದಿಲ್ಲ. ಬಲವಂತದ ಮತಾಂತರ ನಡೆಯಿತು, ಅವರನ್ನು ಅವಮಾನಿಸಲಾಗಿದೆ, ಅವರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಲಾಯಿತು, ಅವರು ಎಲ್ಲಿಗೆ ಹೋಗುತ್ತಾರೆ? ನಮ್ಮ ಸಂಸತ್ ಮತ್ತು ರಾಜಕೀಯ ಪಕ್ಷಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತವೆಯೇ? ಎಂದು ಕೇಳಿದ್ದಾರೆ.

1951 ರಲ್ಲಿ ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ 22 ಪ್ರತಿಶತದಷ್ಟು ಹಿಂದೂಗಳು ಇದ್ದಾರೆ. “2011 ರಲ್ಲಿ ಇದು ಶೇಕಡಾ 10 ಕ್ಕೆ ಕಡಿಮೆಯಾಯಿತು. ಅವರು ಎಲ್ಲಿಗೆ ಹೋದರು?. ಅಫ್ಘಾನಿಸ್ತಾನದಲ್ಲಿ 1992 ರಲ್ಲಿ ಸುಮಾರು 2 ಲಕ್ಷ ಸಿಖ್ ಮತ್ತು ಹಿಂದೂಗಳು ಇದ್ದರು. ಈಗ 500 ಉಳಿದಿದ್ದಾರೆ. ಅವರ (ಧಾರ್ಮಿಕ) ನಂಬಿಕೆಗಳ ಪ್ರಕಾರ ಬದುಕುವ ಹಕ್ಕಿಲ್ಲವೇ? ಭಾರತವು ಒಂದಾಗಿರುವಾಗ ಅವರು ನಮ್ಮವರಾಗಿದ್ದರು. ಅವರು ನಮ್ಮ ಸಹೋದರರು, ಸಹೋದರಿಯರು ಮತ್ತು ತಾಯಂದಿರು ಎಂದು ಹೇಳಿದ್ದಾರೆ.

Comments (0)
Add Comment