ಬಾಲಿವುಡ್ ನಟ ಆಮೀರ್ ಖಾನ್ ಪ್ರವಾಹದಿಂದ ರಕ್ಷಣೆ – ನಿಟ್ಟುಸಿರು ಬಿಟ್ಟ ಅಭಿಮಾನಿಗಳು

ಮಿಚುವಾಂಗ್ ಚಂಡಮಾರುತದ ಹೊಡೆತಕ್ಕೆ ಚೆನ್ನೈ ನಗರ ತತ್ತರಿಸಿ ಹೋಗಿದೆ. ಭಾರೀ ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಪ್ರದೇಶಗಳು ಜಲಾವೃತವಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಈಗಾಗಲೇ NDRF, SDRF ತಂಡಗಳು ಸಂತ್ರಸ್ತರ ರಕ್ಷಣೆಗೆ ಧಾವಿಸಿದೆ. ಸಾಮಾನ್ಯ ಜನರು ಮಾತ್ರವಲ್ಲ ಸಿನಿಮಾ ಕಲಾವಿದರು ಕೂಡ ಮಿಚುವಾಂಗ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಟ ವಿಷ್ಣು ವಿಶಾಲ್ ಕೂಡ ಪ್ರವಾಹದಲ್ಲಿ ಸಿಲುಕಿದ್ದರು. ಕಾರಪ್ಪಕಂನಲ್ಲಿರುವ ಅವರ ನಿವಾಸಕ್ಕೆ ನೀರು ಬಂದಿದೆ ಎಂದು ವಿಷ್ಣು ವಿಶಾಲ್ ಹೇಳಿದ್ದರು. ಪ್ರವಾಹದ ನೀರು ಮನೆಗೆ ನುಗ್ಗುತ್ತಿದ್ದಂತೆ ವಿಷ್ಣು ವಿಶಾಲ್ ಮನೆಯ ಮೇಲೆ ಹತ್ತಿದ್ದಾರೆ. ಅಲ್ಲಿದ್ದ ಫೋಟೋವನ್ನು ಶೇರ್ ಮಾಡಿದ್ದಾರೆ. ವಿದ್ಯುತ್, ಇಂಟರ್ ನೆಟ್ ಸೌಲಭ್ಯವಿಲ್ಲ ಎಂದು ವಿಶಾಲ್ ಪೋಸ್ಟ್ ಮಾಡಿದ್ದಾರೆ. ಸದ್ಯ ಚೆನ್ನೈ ಅಗ್ನಿಶಾಮಕ ಸಿಬ್ಬಂದಿ ನಟ ವಿಷ್ಣು ವಿಶಾಲ್ ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದೆ. ಆದರೆ ವಿಶಾಲ್ ಜೊತೆ ಬಾಲಿವುಡ್ ನಟ ಆಮೀರ್ ಖಾನ್ ಕಾಣಿಸಿಕೊಂಡಿದ್ದಾರೆ. ಅಯ್ಯೋ ಚೆನ್ನೈ ಪ್ರವಾಹದಲ್ಲಿ ಆಮೀರ್ ಖಾನ್ ಏನು ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯ ಚಿಕಿತ್ಸೆಗಾಗಿ ನಟ ಆಮೀರ್ ಖಾನ್ ಕೆಲ ದಿನಗಳಿಂದ ಚೆನ್ನೈನಲ್ಲಿ ಬೀಡುಬಿಟ್ಟಿದ್ದಾರೆ. ಚೆನ್ನೈನ ಕರಪಾಕ್ಕಂ ಪ್ರದೇಶದಲ್ಲಿ ವಿಷ್ಣು ವಿಶಾಲ್ ಪತ್ನಿ ಜ್ವಾಲಾ ಗುಟ್ಟಾ ಜೊತೆ ನೆಲೆಸಿದ್ದಾರೆ. ಅವರ ಮನೆಯಲ್ಲೇ ಆಮೀರ್ ಖಾನ್ ಕೂಡ ಇದ್ದರು ಎನ್ನಲಾಗುತ್ತಿದೆ. 24 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ, ಫೋನ್ ಸಿಗ್ನಲ್ ಸಿಗದೇ ಸಂಕಷ್ಟಕ್ಕೆ ಸಿಲುಕಿದಿದ್ದರು. ರಕ್ಷಣಾ ಸಿಬ್ಬಂದಿ ತಮ್ಮನ್ನು ರಕ್ಷಿಸಿರುವ ಬಗ್ಗೆ ನಟ ವಿಷ್ಣು ವಿಶಾಲ್ ಪೋಸ್ಟ್ ಮಾಡಿದ್ದಾರೆ.

Comments (0)
Add Comment