ಮಹಿಳೆ ಬೆತ್ತಲಾಗಿಸಿದ ಪ್ರಕರಣ ಮರುಕಳಿಸದಂತೆ ಕ್ರಮಕ್ಕೆ ಬಿ.ವೈ.ವಿಜಯೇಂದ್ರ ಮನವಿ

ಬೆಳಗಾವಿ: ಹೊಸ ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲಾಗಿಸಿದ ಪ್ರಕರಣ ಖಂಡನೀಯ. ಇಂಥ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದರು.

ಬೆಳಗಾವಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಂಟಮೂರಿಯ ಘಟನೆ ನಾವು ಪ್ರತಿಯೊಬ್ಬರೂ ತಲೆತಗ್ಗಿಸುವಂತೆ ಮಾಡಿದೆ. ನಾಗರಿಕ ಸಮಾಜದಲ್ಲಿ ಈ ರೀತಿ ಅಮಾನವೀಯವಾಗಿ ಆ ತಾಯಿಯನ್ನು ಗಂಟೆಗಟ್ಟಲೆ ಕಟ್ಟಿಹಾಕಿ ಇಂಥ ಘಟನೆ ನಡೆದುದು ಖಂಡನಾರ್ಹ ಎಂದರು.

ಇಂಥ ಘಟನೆ ಪುನರಾವರ್ತನೆ ಆಗಬಾರದು. ದೇಶದ ಜನರ ಮುಂದೆ ತಲೆತಗ್ಗಿಸುವಂಥ ಇಂಥ ಘಟನೆ ಮರುಕಳಿಸದಂತೆ ರಾಜ್ಯ ಸರಕಾರ ಮತ್ತು ಗೃಹ ಸಚಿವರು, ಪೊಲೀಸ್ ಇಲಾಖೆ ಸ್ಪಷ್ಟ ಸಂದೇಶ ಕೊಡಬೇಕು ಎಂದು ಅವರು ಮನವಿ ಮಾಡಿದರು. ಈ ರೀತಿಯ ಘಟನೆ ಕುರಿತು ಯಾರೂ ಯೋಚಿಸದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

Comments (0)
Add Comment