ಮಿಚಾಂಗ್ ಚಂಡಮಾರುತ: ಚೆನ್ನೈ ನಗರದಲ್ಲೂ ಪ್ರವಾಹ ಭೀತಿ

ಚೆನ್ನೈ: ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಚೆನ್ನದಲ್ಲೂ ಪ್ರವಾಹ ಭೀತಿಯುಂಟಾಗಿದೆ. ಈಗಾಗಲೇ ಚೆನ್ನೈನಲ್ಲಿ 5 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದು, ನೀರುಪಾಲಾಗುತ್ತಿದ್ದ 20ಕ್ಕೂ ಹೆಚ್ಚು ಜನರನ್ನು ರಕ್ಷಣಾ ಪಡೆಗಳು ರಕ್ಷಿಸಿದೆ.

ಬಂಗಾಳಕೊಲ್ಲಿಯಲ್ಲಿ ಅಲ್ಪಾವಧಿಯ ವಾಯುಭಾರ ಕುಸಿತದಿಂದ ಚೆನ್ನೈನಲ್ಲಿ ನಿರಂತರ ಮಳೆಯಾಗುತ್ತಿದೆ. ಭಾನುವಾರ ಬೆಳಗ್ಗೆಯಿಂದ 400ರಿಂದ 500 ಮಿ.ಮೀ ಮಳೆ ಸುರಿದಿದ್ದು, ನಗರ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಜೀವನವೇ ಅಸ್ತವ್ಯಸ್ತಗೊಂಡಿದೆ. ಚೆನ್ನೈನ ವಿಮಾನ ನಿಲ್ದಾಣ ಸೇರಿದಂತೆ ಬಹುತೇಕ ಭಾಗಗಳು ಜಲಾವೃತವಾಗಿದ್ದು, ರೈಲು-ವಿಮಾನ ಸಂಚಾರ ಸಹ ಸ್ಥಗಿತಗೊಂಡಿದೆ. ಇನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

೨೦೧೫ ರಲ್ಲಿ ಚೆನ್ನೈನಲ್ಲಿ ಸುರಿದ ಮಳೆಯ ನಂತರ ಇದೇ ಮೊದಲ ಬಾರಿಗೆ ಈ ಮಟ್ಟದ ಮಳೆಯಾಗಿದ್ದು, ಪ್ರವಾಹದ ಭೀತಿ ಮತ್ತೆ ಜನರನ್ನು ಕಾಡುತ್ತಿದೆ. ಇನ್ನು ಸಾಧ್ಯವಾದಷ್ಟು ಜನರು ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರ ಮಾಹಿತಿ ಹೊರಡಿಸಿದೆ.

Comments (0)
Add Comment