ಮುರುಘಾ ಶ್ರೀಗೆ ಮತ್ತೆ ಬಂಧನದ ಭೀತಿ : ಎರಡನೇ ಪೋಕ್ಸೋ ಕೇಸ್‌ನಲ್ಲಿ ವಾರೆಂಟ್ ಜಾರಿ

ಚಿತ್ರದುರ್ಗ : ಕೆಲವೇ ದಿನಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಇದೀಗ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಮುರುಘಾ ಶರಣರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.

ಮೊದಲನೇ ಪೋಕ್ಸೋ ಪ್ರಕರಣದಲ್ಲಿ ನವೆಂಬರ್16 ರಂದು ಹೈಕೋರ್ಟ್ ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ ಮುರುಘಾ ಶ್ರೀಗಳಿಗೆ ಎರಡನೇ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಜಾಮೀನು ರಹಿತ ಬಂಧನಕ್ಕೆ ಆದೇಶಿಸಿದೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರು ಈ ಆದೇಶವನ್ನು ನೀಡಿದ್ದಾರೆ. ಆರೋಪಿ ಮುರುಘಾ ಶ್ರೀಯನ್ನು ಕೂಡಲೇ ಬಂಧಿಸಿ ಇಂದು ಸಂಜೆ ಒಳಗೆ ಕೋರ್ಟ್​ ಮುಂದೆ ಹಾಜರ್ ಪಡಿಸುವಂತೆ ಆದೇಶಿಸಲಾಗಿದೆ. ಇನ್ನು ಚಿತ್ರದುರ್ಗ ಪೊಲೀಸರು ಗೊಂದಲದಲ್ಲಿದ್ದು ಮೊದಲ ಕೇಸ್​ ಪ್ರಕಾರ ಹೈಕೋರ್ಟ್ ಹೇಳಿದಂತೆ ಮುರುಘಾ ಶ್ರೀಗಳು ಚಿತ್ರದುರ್ಗಕ್ಕೆ ಹೋಗಬಾರದು. ಆದರೆ ಈಗ 2ನೇ ಕೇಸ್​ನಲ್ಲಿ ಆದೆಶ ನೀಡಿರುವ ಕೋರ್ಟ್​ ಚಿತ್ರದುರ್ಗದಲ್ಲೇ ಇರುವುದರಿಂದ ಬಂಧಿಸಿ ಕರೆತರುವಂತೆ ಸೂಚಿಸಿದೆ. ಹೀಗಾಗಿ ಪೊಲೀಸರು ಗೊಂದಲದಲ್ಲಿದ್ದಾರೆ. ಹೀಗಾಗಿ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

Comments (0)
Add Comment