ರಾಜ್ಯದಲ್ಲಿ ಬಿಸಿಲಿನ ತಾಂಡವ – ಮುಂದುವರಿದ ಬಿಸಿ ಗಾಳಿ : 8 ಜಿಲ್ಲೆಗಳಲ್ಲಿ 40ರ ಗಡಿ ದಾಟಿದ ಉಷ್ಣಾಂಶ

ಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪ ತಾಂಡವವಾಡುತ್ತಿದೆ. ದಿನದಿಂದ ದಿನಕ್ಕೆ ಸೂರ್ಯನ ಕೋಪ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಇನ್ನು, ಬಿಸಿ ಗಾಳಿ ಕೂಡಾ ಬಿಸಿ ಗಾಳಿ ಮುಂದುವರಿದಿದ್ದು, ಸೋಮವಾರ 8 ಜಿಲ್ಲೆಗಳಲ್ಲಿ ಉಷ್ಣಾಂಶ 40ರ ಗಡಿ ದಾಟಿದೆ. 18 ಜಿಲ್ಲೆಗಳಲ್ಲಿ 37-39ರ ಅಸುಪಾಸಿನಲ್ಲಿ ತಾಪಮಾನ ದಾಖಲಾಗಿದೆ.

ಚಿಕ್ಕಮಗಳೂರು, ಕೊಡಗಿನಲ್ಲಿ ವಾಡಿಕೆಯಷ್ಟೇ ಇದೆ. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 2-4 ಡಿ.ಸೆ.ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದು, ಇದರಿಂದಾಗಿ ಕರುನಾಡು ಕಾದ ಕೆಂಡವಾಗಿದೆ. ಕೆಲವೆಡೆ ರಾತ್ರಿ ವೇಳೆ ಬೆಚ್ಚಗಿನ ವಾತಾವರಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿಯೂ ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಇನ್ನಷ್ಟು ಹೆಚ್ಚಳಗೊಂಡು ಬಿಸಿ ವಾತಾವರಣ ಜನರಿಗೆ ಬಾಧಿಸಲಿದೆ.

ಬಳ್ಳಾರಿ 43.3, ಕಲಬುರಗಿ 42.7, ರಾಯಚೂರು 41.1, ಬಾಗಲಕೋಟೆ 40.5, ಕೊಪ್ಪಳ 40.3, ವಿಜಯಪುರ 40, ತುಮಕೂರು 40.5 ಉಷ್ಣಾಂಶ ದಾಖಲಾಗಿದೆ. ಉತ್ತರ ಕನ್ನಡ, ಬಾಗಲಕೋಟೆ, ಕಲಬುರಗಿ, ರಾಯಚೂರು, ಬಳ್ಳಾರಿ ಸೇರಿ ಅರ್ಧ ಕರ್ನಾಟಕಕ್ಕೆ ಮುಂದಿನ ಎರಡು ದಿನ ಬಿಸಿಗಾಳಿ ತಾಪ ತಟ್ಟಲಿದೆ. ಕೊಪ್ಪಳ, ರಾಯಚೂರು, ಕಲಬುರಗಿಯಲ್ಲಿ ರಾತ್ರಿ ವೇಳೆ ಬೆಚ್ಚಗಿನ ವಾತಾವರಣ ಉಂಟಾಗಲಿದೆ.

ಉಡುಪಿ, ದಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ ಐದು ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಬೆಂಗಳೂರಿನಲ್ಲಿ 37ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದ್ದು, ಶುಷ್ಕ ವಾತಾವರಣ ಇರಲಿದೆ. ಕನಿಷ್ಠ ಉಷ್ಣಾಂಶ 23 ಡಿ.ಸೆ.ಇರಲಿದೆ. ಮಳೆ ಬಿಸಿಲಿನ ಹೊಡೆತಕ್ಕೆ ತತ್ತರಿಸಿರುವ ರಾಜ್ಯಕ್ಕೆ ಏ.12ರಿಂದ ಮಳೆ ಸಿಂಚನವಾಗಲಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್​, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು, ಬೆಂ.ಗ್ರಾಮಾಂತರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರದಲ್ಲಿ ಏ.12ರಿಂದ ಏ.15ರವರೆಗೆ ಮಳೆ ಬೀಳಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಏ.14,ಏ.15ರಂದು ಹಗುರದಿಂದ ಕೂಡಿದ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Comments (0)
Add Comment