ರಾಜ್ಯ ಚುನಾವಣಾ ಅಖಾಡಕ್ಕೆ ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ

ಬೆಂಗಳೂರು : ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಕರ್ನಾಟಕದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್‌, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಯನ್ನ ನಡೆಸುತ್ತಿದ್ದು, ರಾಜ್ಯ ಚುನಾವಣಾ ಅಖಾಡಕ್ಕೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿಯಾಗುತ್ತಿದ್ದಾರೆ.

ಹೌದು, ಕರ್ನಾಟಕದಲ್ಲಿರುವ ತೆಲುಗು ಮತದಾರರನ್ನು ಸೆಳೆಯಲು ರಾಜ್ಯ ಬಿಜೆಪಿ ಘಟಕ ಮಾಸ್ಟರ್‌ ಪ್ಲಾನ್‌ ನಡೆಸಿದ್ದು, ಟಾಲಿವುಡ್ ಪವರ್ ಸ್ಟಾರ್ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರನ್ನು ರಾಜ್ಯಕ್ಕೆ ಬಿಜೆಪಿ ಕರೆ ತರುತ್ತಿದೆ. ರಾಜ್ಯದಲ್ಲಿ ತೆಲುಗು ಭಾಷಿಗರು ಹೆಚ್ಚಿರುವ ನಾಲ್ಕು ಕ್ಷೇತ್ರಗಳಲ್ಲಿ ಏಪ್ರಿಲ್ 17 ರಂದು ಪವನ್ ಕಲ್ಯಾಣ್ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಹಲವು ಸಮುದಾಯದ ಮತಗಳನ್ನ ಸೆಳೆಯುವ ನಿಟ್ಟಿನಲ್ಲಿ ರಾಜ್ಯಕ್ಕೆ ಪವನ್ ಕಲ್ಯಾಣ್ ಏಪ್ರಿಟ್‌ 17 ಕ್ಕೆ ಆಗಮಿಸುತ್ತಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.

ತೆಲುಗು ಮತದಾರರು ಹೆಚ್ಚಾಗಿರುವ ಲೋಕಸಭಾ ಕ್ಷೇತ್ರಗಳಾದ ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ರೋಡ್ ಶೋ ನಡೆಸುವ ಮೂಲಕ ಅಭ್ಯರ್ಥಿಗಳಾದ ರಾಜಾ ಅಮರೇಶ್ವರ ನಾಯಕ, ಬಿ. ಶ್ರೀರಾಮುಲು, ಡಾ. ಸುಧಾಕರ್, ತೇಜಸ್ವಿ ಸೂರ್ಯ ಪರವಾಗಿ ಮತಯಾಚಿಸಲಿದ್ದಾರೆ. ರಾಯಚೂರು ಆಂಧ್ರಪ್ರದೇಶದ ಜೊತೆ ನಂಟು ಹೊಂದಿದ್ದು, ತೆಲುವು ಭಾಷಿಕರು ಹೆಚ್ಚಿದ್ದಾರೆ. ಜೊತೆಗೆ ಆಂಧ್ರದ ಸಿನಿ ತಾರೆಯರ ಪ್ರಭಾವವೂ ಅವರ ಮೇಲೆ ಹೆಚ್ಚಿದೆ. ಹೀಗಾಗಿ, ಅಲ್ಲಿನ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಪರ ಪ್ರಚಾರ ನಡೆಸಿ ತೆಲುಗು ಭಾಷಿಗರನ್ನು ಸೆಳೆಯುವ ನಿಟ್ಟಿನಲ್ಲಿ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ರಯತ್ನ ನಡೆಸಲಿದ್ದಾರೆ.

Comments (0)
Add Comment