‘ರಾಮ ಮಂದಿರ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ’- ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಮ ಮಂದಿರ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾವು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಕಾಂಗ್ರೆಸ್ ನವರಿಗೂ ಆಹ್ವಾನ ನೀಡಲಾಗಿದೆ ಎಂದರು.

ಬಾಬ್ರಿ ಮಸೀದಿ ವಿಚಾರ ಇದೀಗ ಮುಗಿದ ಅಧ್ಯಾಯವಾಗಿದೆ. ಶ್ರೀ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಯುಪಿಎ ಮೈತ್ರಿಕೂಟದವರು,ಶ್ರೀ ರಾಮ ಮಂದಿರ ವಿಚಾರವನ್ನು ಮತ ಬ್ಯಾಂಕ್ ಕಾರಣಕ್ಕೆ ರಾಜಕೀಕರಣಗೊಳಿಸುತ್ತಾರೆ ಎಂದರು.

ರಾಜ್ಯದಲ್ಲಿ ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಮಾತನಾಡಿದವರಿಗೆ ವಿಶೇಷ ಸ್ಥಾನ ಸಿಗುವಂತಹ ಸ್ಥಿತಿ ಕಾಂಗ್ರೆಸ್ನಲ್ಲಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ನ ಮೂವರು ಹಿರಿಯ ಶಾಸಕರಿಗೆ ವಿಶೇಷ ಸ್ಥಾನ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮ್ಮ ವಿರುದ್ಧ ಮಾತನಾಡಿದವರಿಗೆ ವಿಶೇಷ ಸ್ಥಾನ ಲಭಿಸುತ್ತದೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿಯಲ್ಲಿ ಯಾರೇ ಆಗಲಿಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಶಾಸಕಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕಿಡಿಕಾರಿದ್ದರು.

 

Comments (0)
Add Comment