ವಯನಾಡು ಆನೆ ದಾಳಿ ಪ್ರಕರಣ: ಕರ್ನಾಟಕದ ಪರಿಹಾರ ತಿರಸ್ಕರಿಸಿದ ಸಂತ್ರಸ್ತನ ಕುಟುಂಬ

ವಯನಾಡ್: ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಧನವನ್ನು ಕರ್ನಾಟಕ ಸರ್ಕಾರ ಘೋಷಿಸಿತ್ತು. ಇದೀಗ ಸಂತ್ರಸ್ತನ ಕುಟುಂಬ ಈ ಪರಿಹಾರವನ್ನು ತಿರಸ್ಕರಿಸಿದೆ.

ಕೇರಳದ ವಯನಾಡಿನಲ್ಲಿ ಫೆ. 10ರಂದು ಪ್ರಜೇಶ್ ಎಂಬುವವರು ಆನೆ ದಾಳಿಗೆ ಬಲಿಯಾಗಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಸರ್ಕಾರ ಪರಿಹಾರವನ್ನು ಘೋಷಿಸಿತ್ತು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆಕ್ಷೇಪದ ಬೆನ್ನಲ್ಲೇ ಇದೀಗ ಸಂತ್ರಸ್ತ ಪ್ರಜೇಶ್ ಕುಟುಂಬ ಕರ್ನಾಟಕದ ಪರಿಹಾರದ ಮೊತ್ತವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದೆ.

ವಯನಾಡು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರವಾಗಿದೆ. ಅವರ ಕ್ಷೇತ್ರದಲ್ಲಿ ಆನೆದಾಳಿಗೆ ವ್ಯಕ್ತಿ ಬಲಿಯಾಗಿರುವುದರಿಂದ ಕಾಂಗ್ರೆಸ್ ಪರಿಹಾರ ಘೋಷಿಸಿತ್ತು. ರಾಹುಲ್ ಗಾಂಧಿ ಅವರನ್ನು ಮೆಚ್ಚಿಸುವ ಸಲುವಾಗಿ ಸಿದ್ದರಾಮಯ್ಯ ಅವರ ಸರ್ಕಾರ ಕರ್ನಾಟಕ ರಾಜ್ಯದ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಆಕ್ಷೇಪಿಸಿತ್ತು.

Comments (0)
Add Comment