ವಿಮಾನ ಸಿಬ್ಬಂದಿ ಎಡವಟ್ಟು, ರಸಾಯನಿಕ ಕುಡಿದ ಮಯಾಂಕ್‌ ಅಗರ್ವಾಲ್ – ದೂರು ದಾಖಲು

ತ್ರಿಪುರಾ:ಭಾರತ ತಂಡದ ಕ್ರಿಕೆಟಿಗ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗು ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಶೌಚಾಲಯ ಸ್ವಚ್ಛತೆಗೆ ಬಳಕೆ ಮಾಡುವ ರಾಸಾಯನಿಕವನ್ನು ನೀರೆಂದು ಕುಡಿದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಗರ್ವಾಲ್ ಅವರು ತನ್ನ ಮ್ಯಾನೇಜರ್ ಮೂಲಕ ಪೊಲೀಸರಿಗೆ ಔಪಚಾರಿಕ ದೂರು ನೀಡಿದ್ದಾರೆ. “ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಮಯಾಂಕ್ ಅಗರ್ವಾಲ್ ಅವರು ಈಗ ಸ್ಥಿರವಾಗಿದ್ದಾರೆ.

ಆದರೆ ಅವರ ಮ್ಯಾನೇಜರ್ ಈ ವಿಷಯದ ತನಿಖೆಗಾಗಿ NCCPS ಅಡಿಯಲ್ಲಿ ನಿರ್ದಿಷ್ಟ ದೂರು ದಾಖಲಿಸಿದ್ದಾರೆ” ಎಂದು ಎಸ್ಪಿ ಪಶ್ಚಿಮ ತ್ರಿಪುರಾ ಕಿರಣ್ ಕುಮಾರ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಅವರ ಮ್ಯಾನೇಜರ್ ಪ್ರಕಾರ ವಿಮಾನದಲ್ಲಿ ಕುಳಿತಾಗ ಅವರ ಮುಂದೆ ಪೌಚ್ ಇತ್ತು. ಅವರು ಸ್ವಲ್ಪ ಹೆಚ್ಚು ಕುಡಿಯಲಿಲ್ಲ ಆದರೆ ಇದ್ದಕ್ಕಿದ್ದಂತೆ ಅವರ ಬಾಯಿಯಲ್ಲಿ ಕಿರಿಕಿರಿ ಕಾಣಿಸಿಕೊಂಡಿತು, ಅವರಿಗೆ ಮಾತನಾಡಲೂ ಸಾಧ್ಯವಾಗಲಿಲ್ಲ, ಕೂಡಲೇ ಅವರನ್ನು ಐಎಲ್ಎಸ್ ಆಸ್ಪತ್ರೆಗೆ ಕರೆತರಲಾಯಿತು. ಅವರ ಬಾಯಿಯಲ್ಲಿ ಊತ ಮತ್ತು ಹುಣ್ಣುಗಳಿದ್ದವು” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇತ್ತ ಮಯಾಂಕ್ ಅಗರ್ವಾಲ್ ಅವರು ರೈಲ್ವೇಸ್ ವಿರುದ್ದದ ಮುಂದಿನ ಪಂದ್ಯವನ್ನು ಆಡುವುದಿಲ್ಲ ಎಂದು ಕೆಎಸ್ ಸಿಎ ಹೇಳಿದೆ. “ಅವರು ಕರ್ನಾಟಕದ ಮುಂದಿನ ಪಂದ್ಯದಲ್ಲಿ ಆಡುವುದಿಲ್ಲ. ಆದರೆ ಅದನ್ನು ಹೊರತುಪಡಿಸಿ, ಯಾವುದೇ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಅವರು ಈಗ ಸ್ಥಿರವಾಗಿದ್ದಾರೆ ಮತ್ತು ನಾವು ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಹೇಳಿದೆ.

ಇನ್ನು ಇವರು ದಾಖಲಾಗಿರುವ ತ್ರಿಪುರಾದ ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಯ ಆಡಳಿತ ಮಂಡಳಿ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ್ದು ಮಯಾಂಕ್ ಆರೋಗ್ಯ ಪ್ರಾಯೋಗಿಕವಾಗಿ ಸ್ಥಿರವಾಗಿದ್ದು, ನಿರಂತರವಾಗಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ” ಎಂದು ಹೇಳಿದೆ.

ಆಸ್ಪತ್ರೆ ಮೂಲಗಳ ಪ್ರಕಾರ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರು ಪ್ರಸ್ತುತ ಪ್ರಾಣಾಪಾಯದಿಂದ ಪಾರಾಗಿದ್ದು ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಶೀಘ್ರ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ ಅನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಇದೇ ವಿಚಾರವಾಗಿ ಮಾತನಾಡಿರುವ ತ್ರಿಪುರಾ ಆರೋಗ್ಯ ಕಾರ್ಯದರ್ಶಿ ಕಿರಣ್ ಗಿಟ್ಟೆ ಅವರು ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ‘ಕರ್ನಾಟಕ ರಣಜಿ ತಂಡದ ಸದಸ್ಯ ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ನೀರಿನ ಬಾಟಲಿ ಎಂದು ಭಾವಿಸಿ ರಾಸಾಯನಿಕ ಸೇವಿಸಿದ್ದಾರೆ.

ತಕ್ಷಣವೇ ಅವರಿಗೆ ಗಂಟಲು ಮತ್ತು ಬಾಯಲ್ಲಿ ಉರಿಯ ಅನುಭವವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ.
ಇದರಿಂದ ಬಹುಬೇಗ ಹೊರಬರಲಿ ಎಂದು ಹಾರೈಸುತ್ತೇವೆ.ಅಂತೆಯೇ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

Comments (0)
Add Comment