ಶಬರಿಮಲೆ – ಪಂಪಾ ನದಿಯಲ್ಲಿ ಮುಳುಗಿ ಇಬ್ಬರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಸಾವು

ಶಬರಿಮಲೆ: ಶಬರಿಮಲೆ ಪಂಪಾ ನದಿಯಲ್ಲಿ ಸ್ನಾನಕ್ಕೆ ಇಳಿದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ.

ಮೃತರನ್ನು ಚೆನ್ನೈ ಟಿ ನಗರ ನಿವಾಸಿ ಸಂತೋಷ್(19), ಅವಿನಾಶ್(21) ಎಂದು ಗುರುತಿಸಲಾಗಿದೆ. ಮೃತರು ಚೆನ್ನೈ ಮೂಲದವರು. ಅವರು 22 ಸದಸ್ಯರ ಯಾತ್ರಾರ್ಥಿ ಗುಂಪಿನ ಭಾಗವಾಗಿದ್ದರು ಮತ್ತು ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಬುಧವಾರ ರಾತ್ರಿ ರೈಲಿನಲ್ಲಿ ತಮ್ಮ ತವರು ರಾಜ್ಯಕ್ಕೆ ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ನಾನಕ್ಕೆಂದು ಒಬ್ಬ ವ್ಯಕ್ತಿಯು ಆರಂಭದಲ್ಲಿ ನೀರಿಗೆ ಇಳಿದಾಗ ಕಾಲು ಜಾರಿ ಆತ ನೀರಿನಲ್ಲಿ ಮುಳುಗಿದ್ದಾರೆ, ಈ ವೇಳೆ ಆತನನ್ನು ರಕ್ಷಿಸಲು ಮತ್ತೋರ್ವ ಮಾಲಾಧಾರಿ ವ್ಯಕ್ತಿ ನೀರಿ ಇಳಿದಾಗ ಇಬ್ಬರೂ ಕೊಚ್ಚಿಕೊಂಡು ಹೋದರು ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕೇರಳ ಅಗ್ನಿಶಾಮಕ ದಳ ನದಿಯಿಂದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Comments (0)
Add Comment