ಶಾಲೆಗೆ ಗೈರಾಗುತ್ತಿದ್ದಕ್ಕೆ ಬುದ್ದಿವಾದ: ತಾಯಿ ಮಾತಿಗೆ ಸಿಟ್ಟಾಗಿ ರೈಲಿಗೆ ತಲೆಕೊಟ್ಟ ಬಾಲಕಿ

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾದಲ್ಲಿ ಬಾಲಕಿಯೊಬ್ಬಳು ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಶಾಲೆಗೆ ಹೋಗಲು ನಿರಾಕರಿಸಿದ್ದಕ್ಕಾಗಿ ಆಕೆಯ ತಾಯಿ ಬೈದಿದ್ದಕ್ಕೆ ಕೋಪಗೊಂಡ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಖುಷಿ ಶರ್ಮಾ (13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.

ಘಟನೆ ವಿವರ:

ಶಾಲೆಗೆ ಹೋಗುವುದಕ್ಕೆ ಇಷ್ಟವಿಲ್ಲದ ಕಾರಣ ಖುಷಿ ಆಗಾಗ ಶಾಲೆಗೆ ರಜೆ ಹಾಕುತ್ತಿದ್ದಳು. ಈ ವಿಷಯ ತಿಳಿದು ಕೋಪಗೊಂಡ ತಾಯಿ ಮಗಳಿಗೆ ಗದರಿಸಿ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಮಗಳು ತನ್ನ ಬ್ಯಾಗ್ ತೆಗೆದುಕೊಂಡು ಶಾಲೆಗೆ ಹೋಗದೆ ಮನೆಯಿಂದ ಹೊರಟು ಹೋಗಿದ್ದಾಳೆ. ಬದಲಾಗಿ ಅಲ್ವಾರ್-ಮಥುರಾ ರೈಲ್ವೇ ಹಳಿಯ ಬಳಿ ಹೋಗಿ ರೈಲು ಬರುವವರೆಗೂ ಅಲ್ಲಿಯೇ ಕಾದು, ರೈಲು ಬಂದಾಗ ಅದರ ಮುಂದೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.

ಘಟನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಬಾಲಕಿಯ ಬಗ್ಗೆ ವಿವರ ಪಡೆದು ಆಕೆಯ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಲು ಆರಂಭಿಸಿದ್ದಾರೆ.

Comments (0)
Add Comment