ಸಂಪುಟದಿಂದ ಕೆ.ಎನ್​ ರಾಜಣ್ಣರನ್ನು ಕೈ ಬಿಡುವಂತೆ ಸ್ವಪಕ್ಷದ ಕಾರ್ಯಕರ್ತರಿಂದ ಆಗ್ರಹ

ಬೆಂಗಳೂರು: ಸಹಕಾರ ಸಚಿವ ಕೆ.ಎನ್​.ರಾಜಣ್ಣ ಮತ್ತು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ವಿರುದ್ಧ ಎಐಸಿಸಿಗೆ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಸ್ವಪಕ್ಷದ ಕಾರ್ಯಕರ್ತರೇ ದೂರು ನೀಡಿದ್ದು, ಕೆಎನ್​​ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದ್ದಾರೆ.

ಸಚಿವ ಕೆಎನ್​ ರಾಜಣ್ಣ ಅವರು ಪದೇ ಪದೇ ಎಐಸಿಸಿ ಅಧ್ಯಕ್ಷ, ಕೆಪಿಸಿಸಿ ಅಧ್ಯಕ್ಷರ ಆದೇಶದ ವಿರುದ್ಧ ಮಾತಾಡುತ್ತಿದ್ದು, ಅನವಶ್ಯಕವಾಗಿ ಡಿಸಿಎಂ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಕಾಂಗ್ರೆಸ್ ಪಕ್ಷ ಇಂತಹ ಚಟುವಟಿಕೆಗಳನ್ನು ಸಹಿಸಬಾರದು. ಸಂಪುಟದಿಂದ ಸಚಿವ ಕೆ.ಎನ್.ರಾಜಣ್ಣರನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.

ಇನ್ನು ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಕೂಡ ಪಕ್ಷಕ್ಕೆ ವಿರುದ್ದವಾಗಿದೆ ಎಂದು ಕಾಂಗ್ರೆಸ್​​ನ 10 ಕಾರ್ಯಕರ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೆ.ಎನ್. ರಾಜಣ್ಣ, ಸಹಕಾರ ಸಚಿವರು ಆಗಾಗ ಮೂವರು ಉಪಮುಖ್ಯಮಂತ್ರಿಗಳ ಅವಶ್ಯಕತೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದು ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

Comments (0)
Add Comment