ಸಾವರ್ಕರ್ ಫೋಟೋ ಹಾಕಿರೋದು ನನಗೂ ಇಷ್ಟವಿಲ್ಲ- ಶಾಸಕ ರಾಯರೆಡ್ಡಿ

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಅವರ ಪೋಟೋವನ್ನು ಅಳವಡಿಕೆ ಮಾಡಿರುವುದು ನನಗೆ ಇಷ್ಟವಿಲ್ಲ. ಈಗ ಅದನ್ನು ತೆಗೆದುಹಾಕಿ ಎಂದರೆ ವಿವಾದ ಆಗುತ್ತದೆ. ಆದ್ದರಿಂದ, ನಾನು ಈ ಬಗ್ಗೆ ಮಾತನಾಡದೇ ಸುಮ್ಮನಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಫೋಟೋ ತೆಗೆಯಬೇಕು ಎಂಬ ಪ್ರಿಯಾಂಕ್ ಖರ್ಗೆ ಒತ್ತಾಯ ಮಾಡಿದ್ದಾರೆ. ಆದರೆ, ಸಾವರ್ಕರ್ ಪೋಟೋ ಹಾಕಿರೋದು ನನಗೂ ಇಷ್ಟ ಇಲ್ಲ. ಈಗ ತೆಗೆಯಿರಿ ಅಂದ್ರೆ ವಿವಾದ ಆಗುತ್ತದೆ, ಅದಕ್ಕೆ ಸುಮ್ಮನಿದ್ದೇನೆ ಎಂದರು.

ಸಂವಿಧಾನ ರಚನಾ ಸಭೆಯ ಮೊದಲ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಫೋಟೋವನ್ನ ಸುವರ್ಣಸೌಧದಲ್ಲಿ ಹಾಕಬೇಕು. 17 ವರ್ಷ ಭಾರತದ ಆಡಳಿತ ನಡೆಸಿದ ಮಾಜಿ ಪ್ರಧಾನಿ ಜವಹರಲಾಲ್ ನೆಹರು, ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ, ಭಾರತದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಫೋಟೋ ಕೂಡ ಅಳವಡಿಕೆ ಮಾಡಬೇಕು. ಮುಂದುವರೆದು ಕರ್ನಾಟಕ ರಾಜ್ಯದ ಏಕೀಕರಣದ ಪ್ರಥಮ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಹಾಗೂ ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಫೋಟೋ ಕೂಡ ಸದನದಲ್ಲಿ ಅಳವಡಿಕೆ ಮಾಡಬೇಕು ಎಂದು ರಾಯರೆಡ್ಡಿ ವಿಧಾನಸಭಾ ಸ್ಪೀಕರ್ ಅವರಿಗೆ ಒತ್ತಾಯಿಸಿದ್ದಾರೆ.

Comments (0)
Add Comment