Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘My Lord ‘ ಎನ್ನುವುದನ್ನು ನಿಲ್ಲಿಸಿದ್ರೆ ನಿಮಗೆ ನನ್ನ ಅರ್ಧ ಸಂಬಳ ಕೊಡುವೆ: ಸುಪ್ರೀಂ ಕೋರ್ಟ್​ ಜಡ್ಜ್

ನವದೆಹಲಿ: ಭಾರತದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಕೀಲರು ಪ್ರಕರಣಗಳ ಕುರಿತಂತೆ ವಾದ ಮಂಡಿಸುವಾಗ ‘ಮೈ ಲಾರ್ಡ್’ ಮತ್ತು ‘ಯುವರ್ ಲಾರ್ಡ್‌ಶಿಪ್’ ಎಂದು ಹೇಳುತ್ತಾರೆ. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ಬುಧವಾರ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಕುತೂಹಲದ ಘಟನೆ ನಡೆಯಿತು.ಪ್ರಕರಣವೊಂದರ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರೊಂದಿಗೆ ಪೀಠದಲ್ಲಿದ್ದ ನ್ಯಾ.ಪಿ.ಎಸ್.ನರಸಿಂಹ ಅವರು ಹಿರಿಯ ವಕೀಲರೊಬ್ಬರಿಗೆ ‘ಮೈ ಲಾರ್ಡ್ಸ್’ ಎಂದು ಎಷ್ಟು ಬಾರಿ ಹೇಳುತ್ತೀರಿ? ಹೀಗೆ ಹೇಳುವುದನ್ನು ನಿಲ್ಲಿಸಿದರೆ ನನ್ನ ಸಂಬಳದಲ್ಲಿ ಅರ್ಧದಷ್ಟು ನಿಮಗೆ ಕೊಡುತ್ತೇನೆ ಎಂದುಬಿಟ್ಟರು.ನ್ಯಾ.ನರಸಿಂಹ ಅವರು, “ಸರ್ ಎಂದು ಏಕೆ ಬಳಸಬಾರದು?, ಇಲ್ಲದಿದ್ದರೆ ಹಿರಿಯ ವಕೀಲರು ಮೈ ಲಾರ್ಡ್ಸ್ ಎಂಬ ಪದವನ್ನು ಎಷ್ಟು ಬಾರಿ ಉಚ್ಚರಿಸಿದ್ದಾರೆ ಎಂದು ಲೆಕ್ಕ ಹಾಕಬೇಕಾಗುತ್ತದೆ” ಎಂದರು. ನ್ಯಾಯಾಲಯದಲ್ಲಿ ಯಾವುದೇ ಪ್ರಕರಣದ ವಿಚಾರಣೆ ಅಥವಾ ಚರ್ಚೆಯ ಸಮಯದಲ್ಲಿ ವಕೀಲರು ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್‌ಶಿಪ್’ ಎಂದು ಕರೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈ ಪದ್ಧತಿಯನ್ನು ವಿರೋಧಿಸುವವರು ಇದನ್ನು ವಸಾಹತುಶಾಹಿ ಯುಗದ ಅವಶೇಷ ಮತ್ತು ಗುಲಾಮಗಿರಿಯ ಸಂಕೇತವೆಂದು ಕರೆಯುತ್ತಾರೆ.2006ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿರ್ಣಯವೊಂದನ್ನು ಅಂಗೀಕರಿಸಿತ್ತು. ಈ ನಿರ್ಣಯದ ಪ್ರಕಾರ, ಯಾವುದೇ ವಕೀಲರು ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಮತ್ತು ‘ಯುವರ್ ಲಾರ್ಡ್‌ಶಿಪ್’ ಎಂದು ಕರೆಯಬಾರದು. ಆದರೆ ಇದನ್ನು ವಕೀಲರು ಅನುಸರಿಸುತ್ತಿಲ್ಲ. ಹೀಗಾಗಿ ಪದ್ಧತಿ ಜಾರಿಯಲ್ಲಿದೆ.