ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿದ್ದು ಐದು ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ರಾಜ್ಯ ಸರ್ಕಾರ ಈಗಾಗಲೇ ಜಾರಿ ಮಾಡಿದ್ದು ರಾಜ್ಯದ ಮಹಿಳೆಯರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದ ಎಲ್ಲಾ ಮಹಿಳೆಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಹೇಳಿದರು.
ರಾಜ್ಯದಲ್ಲಿ ಶಕ್ತಿ ಯೋಜನೆ ನಿಲ್ಲಿಸುವುದಾಗಿ ಊಹಾಪೋಹಗಳು ಕೇಳಿಬರುತ್ತಿವೆ. ಈ ವಿಚಾರವಾಗಿ ಮಾತನಾಡಿರುವ ಸಚಿವ ರಾಮಲಿಂಗಾ ರೆಡ್ಡಿ, ಯೋಜನೆ ನಿಂತು ಹೋಗುತ್ತದೆ ಅಂತ ಊಹಾಪೋಹಗಳು ಕೇಳಿ ಬರುತ್ತಿವೆ. ಒಂದು ಪಕ್ಷದವರು ಮಾಡಿಸುತ್ತಿದ್ದಾರೆ. ಇನ್ನು 10 ವರ್ಷ ಶಕ್ತಿ ಯೋಜನೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ನಾವು ನುಡಿದಂತೆ ನಡೆದಿದ್ದೇವೆ. ಇದಕ್ಕೆ ನಮ್ಮ ಐದು ಕಾರ್ಯಕ್ರಮಗಳೇ ಸಾಕ್ಷಿ. ಯುವನಿಧಿ, ಗೃಹಲಕ್ಷ್ಮೀ ಯೋಜನೆ ಆರಂಭ ಆಗಿದೆ. ಬಿಜೆಪಿ ನಮ್ಮ ಮೇಲೆ ಆರೋಪ ಮಾಡುತ್ತಾ ಬಂದಿದೆ. ರೂ. 60 ಸಾವಿರ ಕೋಟಿಯನ್ನು ನೇರವಾಗಿ ಬಡ ಜನರಿಗೆ ತಲುಪಿಸುತ್ತಿದ್ದೇವೆ. ನಾವು ಅಕ್ಕಿ ಕೊಡುತ್ತಿರುವುದಕ್ಕೆ ಮೋದಿ ಅಕ್ಕಿ ಅಂತಾ ಆರೋಪ ಮಾಡಿದ್ರು. ಆದರೆ ಅದು ಮೋದಿ ಅಕ್ಕಿಯಲ್ಲ. ಅದಕ್ಕೆ ಬೇಕಾದ ಆಹಾರ ಭದ್ರತೆ ಕಾಯಿದೆ ತಂದಿದ್ದು ಕಾಂಗ್ರೆಸ್. 2013ರಿಂದ 18ರವರೆಗೆ ಇದ್ದ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಬಡ್ಡಿ ರಹಿತ ಸಾಲ ಆರಂಭಿಸಿದ್ದು ಸಿದ್ದರಾಮಯ್ಯ. ಈ ಸಲ ಐದು ಲಕ್ಷದವರೆಗೆ ಬಡ್ಡಿ ರಹಿತ ಸಾಲ ಕೊಡಲಿದ್ದೇವೆ ಎಂದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.